Monday 28 August 2017

ಉತ್ತಮ ಪ್ರಜಾ ಪಕ್ಷ

ಇದು ಪ್ರಾದೇಶಿಕ ಪಕ್ಷಗಳ ಯುಗ. ದಿನಗಳೆದಂತೆ ನಾನಾ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ನೇಪಥ್ಯಕ್ಕೆ ಸರಿಯುತ್ತಿವೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ ಕೊಡದೇ ಹೋಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲೂ ಇಂಥದ್ದೇ ವಾತಾವರಣ ನಿರ್ಮಾಣ ಆಗಿರುವುದರಿಂದ ಜನ ಪ್ರಾದೇಶಿಕ ಪಕ್ಷಗಳತ್ತ ಆಸೆಗಣ್ಣಿನಿಂದ ನೋಡುತ್ತಿರುವ ಈ ಕಾಲದಲ್ಲಿ..ಉಪೇಂದ್ರ ರವರ ಈ ಉತ್ತಮ ಪ್ರಜಾ ಪಕ್ಷ...ಹೇಗೆ.. ಮುಂದುವರೆಯುತ್ತಾರೆಂದು..ಕಾದು ನೋಡಬೇಕು.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಬಹಳ ಕಷ್ಟಪಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದಲ್ಲದೇ ಮೂರು ಹೋಳಾಗಿ ವಿಭಜನೆಗೊಂಡಿದೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏಕಪಕ್ಷ ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ನಡುವೆ ನೇರ ಸಂಘರ್ಷ ಏರ್ಪಟಿದ್ದು, ಕೆಜೆಪಿ, ಬಿಎಸ್‌ಆರ್ ಸೇರಿದಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪಕ್ಷಗಳು ರಾಜಕೀಯ ಕೆಮಿಸ್ಟ್ರಿ ಬದಲಿಸಬಹುದು ಎಂದು ಕೊಂಡಿದ್ದು ಸುಳ್ಳಾಯಿತು.

ರಾಷ್ಟ್ರೀಯ ಪಕ್ಷಗಳ ವರ್ತನೆ ಬಗ್ಗೆ ಜನ ಬೇಸತ್ತಿದ್ದಾರೆ. ತಮ್ಮ ಬೇಸರಕ್ಕೆ ಪರಿಹಾರ ಪ್ರಾದೇಶಿಕ ಪಕ್ಷ ಎಂದು ಮನಗಂಡಿದ್ದಾರೆ. ಆದರೆ ಹಳೇ ಮತ್ತು ಹೊಸ ಪಕ್ಷಗಳ ನಡುವೆ ಅವರ ಆಯ್ಕೆ ಏನು, ಅವರು ಹೇಗೆ ವರ್ತಿಸುತ್ತಾರೆ, ಯಾವ ದೃಷ್ಟಿಕೋನದಿಂದ ನೋಡುತ್ತಾರೆ ಎಂಬುದು ನಿಘಂಟಾಗಿ ಉಳಿದಿದೆ ಎಂದು 'ಕನ್ನಡಪ್ರಭ'ಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಸಂಕ್ಷಿಪ್ತ ಪಾಠ ಹೀಗಿದೆ:

'ಈ ರಾಜ್ಯದಲ್ಲಿ ಒಂದು ಪಕ್ಷದ ಸರ್ಕಾರ ರಚನೆಗೆ ಹೋರಾಟ ನಡೆದಿದೆ. ಜನರ ಬಯಕೆ ಇದೇ ಆಗಿದೆ. ಈ ಹೋರಾಟದ ಮುಂಚೂಣಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಇದೆ. ತಮ್ಮ-ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು, ಬರುತ್ತದೆಂದು ಎಲ್ಲರೂ ಹೇಳಿಕೊಳ್ಳುತ್ತಾರೆ.         

ಆದರೆ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಹೊಸ ಪಕ್ಷಗಳ ಸೃಷ್ಟಿ ರಾಜಕೀಯ ವಾತಾವರಣ ಬದಲಿಸಿದೆ. ಅವುಗಳು ಅಧಿಕಾರದ ಬಳಿ ಸುಳಿಯದಿದ್ದರೂ ಮತ್ತೊಂದು ಪಕ್ಷದ ಮತಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಯಾವ ಪಕ್ಷ ಇನ್ಯಾವ ಪಕ್ಷದ ಮತಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.'

'ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಮ್ಮಿಶ್ರ ಸರಕಾರಗಳ ಯುಗ ಆರಂಭವಾಗಿ ಬಹಳ ಸಮಯವಾಗಿದೆ. ಕೇಂದ್ರದಲ್ಲಿ ಏಕಪಕ್ಷ ಸರಕಾರ ರಚನೆಯಾಗಿದ್ದರು.. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಲು..ಸಾಧ್ಯವಾಗುದೆ ಎಂಬುದು....ಸ್ಪಷ್ಟವಿಲ್ಲ. ರಾಷ್ಟ್ರೀಯ ಪಕ್ಷಗಳು ಜನರ ವಿಶ್ವಾಸ ವಿಮುಖತೆ ಇದಕ್ಕೆ ಕಾರಣ. ತತ್ಪರಿಣಾಮವಾಗಿ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಕಂಡುಕೊಂಡಿವೆ. ರಾಷ್ಟ್ರೀಯ ಪಕ್ಷಗಳ ಕೈಯಿಂದ ಅಧಿಕಾರ ಬಾಚಿಕೊಂಡಿವೆ.  ಇದು ನಿಧಾನವಾಗಿ ರಾಜ್ಯ ಮಟ್ಟದಲ್ಲೂ ಸ್ಥಾನ ಪಡೆದುಕೊಳ್ಳುತ್ತಿದೆ. ಅಲ್ಲೊಂದು-ಇಲ್ಲೊಂದು ಅಪವಾದ ಇರಬಹುದು. ಆದರೆ ಇದು ಪ್ರಾದೇಶಿಕ ಪಕ್ಷಗಳ ಯುಗ ಎನ್ನುವುದರಲ್ಲಿ ಎರಡು ಮಾತಿಲ್ಲ.'

'ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರ ಮತ್ತು ರಾಜ್ಯ ಎರಡೂ ಕಡೆ ಅಭದ್ರ, ಅನಿಶ್ಚಿತ ರಾಜಕೀಯ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಹಿಡಿತದ ರಾಜಕೀಯ ಇತಿಹಾಸ. ಸ್ವಾತಂತ್ರ್ಯ ನಂತರ ನೆಹರೂ ಅವರ ನಾಯಕತ್ವದಿಂದ ಹಿಡಿದು ಈಗಿನ ಸೋನಿಯಾ ಗಾಂಧಿ ಅವರ ನಾಯಕತ್ವದವರೆಗೂ 62 ವರ್ಷಗಳ ಪೈಕಿ 52 ವರ್ಷಗಳ ಆಳ್ವಿಕೆ ಕಾಂಗ್ರೆಸ್ ಪಾರುಪಥ್ಯದಲ್ಲೇ ನಡೆದಿದೆ. ನೆಹರು 15 ವರ್ಷ, ಇಂದಿರಾಗಾಂಧಿ 17, ರಾಜೀವ್ ಗಾಂಧಿ 6, ಪಿ.ವಿ. ನರಸಿಂಹರಾವ್ 5 ಹಾಗೂ ಮನಮೋಹನಸಿಂಗ್ 9 ವರ್ಷ ಅಧಿಕಾರ ನಡೆಸಿದ್ದಾರೆ. ಕಾಂಗ್ರೆಸ್ಸೇತರ ಹಾಗೂ ಕಾಂಗ್ರೆಸ್ ಬೆಂಬಲಿತ ಸರಕಾರಗಳ ಪೈಗಿ ಪೈಕಿ ವಿ.ಪಿ. ಸಿಂಗ್ 13 ತಿಂಗಳು, ಚರಣ್‌ಸಿಂಗ್ 6 ತಿಂಗಳು, ಚಂದ್ರಶೇಖರ್ 6 ತಿಂಗಳು, ತಾವು (ದೇವೇಗೌಡ) 11 ತಿಂಗಳು, ಐ.ಕೆ. ಗುಜ್ರಾಲ್ 7 ತಿಂಗಳು, ವಾಜಪೇಯಿ ಅವರು ಒಟ್ಟು ಆರು ವರ್ಷ ಅಧಿಕಾರ ನಡೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಇರಲಿ, ಕಾಂಗ್ರೆಸ್ಸೇತರ ಸರಕಾರ ಇರಲಿ ಅವುಗಳು ಸಮ್ಮಿಶ್ರ ಸರಕಾರದ ಸ್ವರೂಪದಲ್ಲೇ ಅಧಿಕಾರ ನಡೆಸುತ್ತಿವೆ. ಇದಕ್ಕೆ ಕಾರಣ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಲ್ಲಿ ಮೂಡಿರುವ ಬೇಸರ, ತತ್ಪರಿಣಾಮವಾಗಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚುತ್ತಿರುವ ಮಾನ್ಯತೆ.'

ಕೆಲವು ರಾಜ್ಯಗಳಲ್ಲಂತೂ 24 ಗಂಟೆಯೊಳಗೇ ಮುಖ್ಯಮಂತ್ರಿಗಳು ಬದಲಾದರು. ದಿಲ್ಲಿಯಿಂದ ಬರುವ ಲಕೋಟೆಗಳು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದವು. ಇಂದಿರಾಗಾಂಧಿಯವರು ಪ್ರಧಾನಿ ಆದಾಗ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರಾದರು ದೇಶದ ಎಲ್ಲ ರಾಜ್ಯ ಸರಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮುಂದಾದರು. ತಮಿಳುನಾಡು ಮುಖ್ಯಮಂತ್ರಿ ಕಾಮರಾಜ್, ಎಂ.ಜಿ. ರಾಮಚಂದ್ರನ್  ಅವರು ಇಂದಿರಾಗಾಂಧಿ ಅವರಿಗೆ ಸಮೀಪವರ್ತಿ ಆಗಿದ್ದರು. ಆದರೆ ಯಾವಾಗ ಭಾಷೆ ಆಧಾರಿತ ಕಿಡಿ ಜ್ವಾಲಾಮುಖಿ ಸ್ವರೂಪ ಪಡೆಯಿತೋ ಡಿಎಂಕೆ ಎಂಬ ಪ್ರಾದೇಶಿಕ ಪಕ್ಷ ಉದಯಿಸಿತು, ಅಧಿಕಾರಕ್ಕೂ ಬಂತು. ನಂತರ ಅದು ಡಿಎಂಕೆ, ಅಣ್ಣಾಡಿಎಂಕೆ ಎಂದು ಇಬ್ಭಾಗ ಆಯಿತಾದರೂ ಅಧಿಕಾ ರ ಮಾತ್ರ ಸರದಿ ಮೇಲೆ ಅವುಗಳಲ್ಲಿ ಕೇಂದ್ರಿಕೃತ ಆಯಿತೆ ಹೊರತು ಕಾಂಗ್ರೆಸ್ ಕೈಗೆ ಸಿಗಲಿಲ್ಲ. ಅಲ್ಲಿಂದ ಆರಂಭವಾದ ಪ್ರಾದೇಶಿಕ ಪಕ್ಷಗಳ ಯಶಸ್ವಿ ಶಖೆ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುತ್ತಾ ಹೋಯಿತು. ಕೇರಳದಲ್ಲಿ ಎನ್‌ಡಿಎಫ್, ಯುಡಿಎಫ್, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ, ನಂತರ ತೃಣಮೂಲ ಕಾಂಗ್ರೆಸ್, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಪ ಪಕ್ಷ, ಬಿಹಾರದಲ್ಲಿ ಆರ್‌ಜೆಡಿ, ಜೆಡಿ(ಯು), ಒರಿಸ್ಸಾದಲ್ಲಿ ಬಿಜು ಜನತಾ ದಳ, ಮಹಾರಾಷ್ಟ್ರದಲ್ಲಿ ಶಿವಸೇನೆ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ತತ್ವದ ಆಧಾರದ ಮೇರೆಗೆ ಅಧಿಕಾರ ಕಂಡವು. ಅದೇ ರೀತಿ ಈಶಾನ್ಯ ರಾಜ್ಯಗಳಲ್ಲೂ ಕಾಂಗ್ರೆಸ್ ಹಿಡಿತ ಕಳೆದುಕೊಂಡಿತು.'

'ಕರ್ನಾಟಕದಲ್ಲಿ 1983 ರಲ್ಲೇ ಜನತಾ ಪಕ್ಷ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂತು. ಅಲ್ಲಿಂದಲೇ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಯುಗ ಆರಂಭವಾಯಿತು. ಅದಕ್ಕೆ ಮೊದಲು ಕಾಂಗ್ರೆಸ್ ಸರಕಾರಕ್ಕೆ ಅದರ ನಾಯಕರೇ ಮುಳ್ಳಾಗುತ್ತಿದ್ದರು. ಭಿನ್ನಮತ ಆಟಿಕೆಯಂತಾಗಿತ್ತು. 1985 ರಲ್ಲಿ ಆಂಧ್ರದಲ್ಲಿ ಎನ್.ಟಿ. ರಾಮರಾವ್ ಸರಕಾರ ಕಿತ್ತೊಗೆದಾಗ ಅವರಿಗೆ ಆಶ್ರಯ ಕೊಟ್ಟದ್ದು ರಾಜ್ಯದ ಜನತಾ ಪಕ್ಷ ಸರಕಾರದ ಮುಖಂಡರು. ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ ಅರಿವಾಗಿದ್ದೆ ಆಗ. ನಂತರ 1989 ರಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತಾದರೂ ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಪಿ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು. ಜನ ಇದರಿಂದ ಬೇಸತ್ತು ಜನತಾ ದಳಕ್ಕೆ ಅಧಿಕಾರ ಕೊಟ್ಟರು. ತಾವು ಮುಖ್ಯಮಂತ್ರಿ ಆಗಿದ್ದರ ಜತೆಗೆ ಮುಂದೆ ಕೇಂದ್ರದಲ್ಲೂ ಪ್ರಾದೇಶಿಕ ಪಕ್ಷಗಳ ಸಂಯುಕ್ತ ಸರಕಾರ ಅಸ್ತಿತ್ವಕ್ಕೆ ಬಂದಾಗ ಪ್ರಧಾನಿ ಹುದ್ದೆಯೂ ದೊರೆಯಿತು. ಪ್ರಾದೇಶಿಕ ಪಕ್ಷಕ್ಕೆ ದೊರೆತ ಅಗ್ರಮಾನ್ಯ ಸ್ಥಾನಮಾನ ಅದು. ನಂತರ 1999 ರ ಹೊತ್ತಿಗೆ ಜನತಾ ದಳ ಇಬ್ಭಾಗ ಆಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು. ತದನಂತರ 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಬಂತು. ಮಹಾರಾಷ್ಟ್ರ ಮಾದರಿ ಸರಕಾರ ರಚನೆಯಾಗಿ ಕಾಂಗ್ರೆಸ್‌ನ ಧರ್ಮಸಿಂಗ್ ಮುಖ್ಯಮಂತ್ರಿಯಾದರು.

ನಂತರ ಕಾಂಗ್ರೆಸ್‌ನ ಆಸೆಬುರುಕತನದಿಂದ ಸರಕಾರ ಪಲ್ಲಟವಾಗಿ, ತಮ್ಮ ಸಮ್ಮತಿ ಇಲ್ಲದ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಿಲ್ಲ ಎಂಬುದನ್ನು ಮುಂದೆ ಮಾಡಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಈ ಸರಕಾರದಲ್ಲಿ ಏನೇನು ನಡೆಯಿತು, ಏನೇನು ಅನಾಹುತ ಆಯಿತು, ಮೂವರು ಮುಖ್ಯಮಂತ್ರಿಗಳು ಏಕೆ ಬಂದರು ಎಂಬುದು ಎಲ್ಲರ ಕಣ್ಣ ಮುಂದೆಯೇ ಇದೆ. ಕಳೆದು ಐದು ವರ್ಷದಲ್ಲಿ ಆಡಳಿತ ಹದಗೆಟ್ಟು ಜನ ರಾಜಕೀಯದ ಬಗ್ಗೆ ಜುಗುಪ್ಸೆ ಪಡುವಂತಾಗಿದೆ. ಇಂಥ ರಾಜಕೀಯ ಸನ್ನಿವೇಶ ನಿರ್ಮಾಣಕ್ಕೆ ಕಾಂಗ್ರೆಸ್ ಹೊಣೆಯೋ, ಜೆಡಿಎಸ್ ಹೊಣೆಯೋ ಎಂಬುದು ಈಗ ಅಗ್ನಿಪರೀಕ್ಷೆಗೆ ಬಂದು ನಿಂತಿದೆ. ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಂದು ಮಾತು ಸತ್ಯ. ರಾಷ್ಟ್ರೀಯ ಪಕ್ಷಗಳು ಏನನ್ನು ಮಾಡಿವೆ, ರಾಜ್ಯವನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ಜನ ಚೆನ್ನಾಗಿ ಮನಗಂಡಿದ್ದಾರೆ. ಪ್ರಾದೇಶಿಕ ಪಕ್ಷದ ಬಗ್ಗೆ ಭರವಸೆಯಿಂದ ನೋಡುತ್ತಿದ್ದಾರೆ. ಜೆಡಿಎಸ್ ಜತೆಗೆ ಇನ್ನೂ ಒಂದಷ್ಟು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಅವುಗಳ ಮೂಲ ಏನು, ಯಾವ ಉದ್ದೇಶಕ್ಕೆ ಅವು ಸೃಷ್ಟಿಯಾದವು, ಅವುಗಳು ಮುಂದಿನ ಚುನಾವಣೆಯಲ್ಲಿ ಬೀರುವ ಪರಿಣಾಮ ಏನು ಎಂಬುದು ಬರೀ ಜನರಿಗಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕುತೂಹಲ ಮೂಡಿಸಿದೆ. ಇಷ್ಟೆಲ್ಲದರ ಮಧ್ಯೆ ಜೆಡಿಎಸ್ ಜನರಲ್ಲಿ ಭಾವನೆ, ಭರವಸೆ, ನಿರೀಕ್ಷೆ ಮೂಡಿಸಿದೆ. ಚುನಾವಣೆ ಹತ್ತಿರದಲ್ಲೇ ಇದೆ. ಮಾತು ಎಷ್ಟೇ ಆಡಿದರೂ ಮಾತಷ್ಟೇ. ನೈಜ ಸ್ಥಿತಿ ಹೊರಹೊಮ್ಮುವುದು ಚುನಾವಣೆಯಲ್ಲೇ. ಕಾಂಗ್ರೆಸ್ ತಮ್ಮ ಸಮೀಪ ಪ್ರತಿಸ್ಪರ್ಧಿ. ಏಕಪಕ್ಷ ಸರಕಾರ ಜನರ ಆಶಯ. ನೋಡೋಣ ಏನಾಗುತ್ತದೋ.

No comments:

Post a Comment