Thursday 21 September 2017

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಗುರುವಾರ ಖ್ಯಾತ ಕವಿ ಪ್ರೊ.ಕೆ.ಎಸ್ ನಿಸಾರ್ ಅಹಮದ್ ಅವರಿಂದ ಚಾಲನೆ

ಕಳೆದ ಐದು ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿ ದಸಾರ ಹಬ್ಬದಲ್ಲಿ ಭಾಗವಹಿಸಿದ್ದೇನೆ. ಮುಂದಿನ ಐದು ವರ್ಷವೂ ಮುಖ್ಯಮಂತ್ರಿಯಾಗಿಯೇ ಭಾಗವಹಿಸುತ್ತೇನೆ…’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಗೆದ್ದು ತಾನೇ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಗುರುವಾರ ಖ್ಯಾತ ಕವಿ ಪ್ರೊ.ಕೆ.ಎಸ್ ನಿಸಾರ್ ಅಹಮದ್ ಅವರಿಂದ ಚಾಲನೆ ದೊರೆಯಿತು. ಬೆಳಗ್ಗೆ 8.45ರ ತುಲಾ ಲಗ್ನದಲ್ಲಿ ನಾಡ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ದಸರಾಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಬ್ಬ ಹಾಗೂ ಕಾವೇರಿ ನದಿ ವಿಚಾರವಾಗಿ ಹೇಳಿದಿಷ್ಟು…

‘ನಾಡಿನ ಸಮಸ್ತ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳು. ಮೈಸೂರು ದಸರಾ ಆರಂಭವಾಗಿ 400 ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪನ ಹೆಗಲ ಮೇಲೆ ಕುಳಿತು ಮೊದಲ ಬಾರಿಗೆ ದಸರಾ ನೋಡಿದ್ದೆ.

ದಸರಾ ಉತ್ಸವ ಜನರ ಹಬ್ಬ. ಈ ಹಬ್ಬವನ್ನು ನಿಸಾರ್ ಅಹಮದ್ ಅವರು ಉದ್ಘಾಟನೆ ಮಾಡಿರುವುದು ಹೆಚ್ಚು ಸಂತಸ ತಂರುವುದರ ಜತೆಗೆ ಉತ್ಸವಕ್ಕೆ ಅರ್ಥ ಬಂದಿದೆ. ನಾಡೋಜ ಕೆ.ಎಸ್. ನಿಸಾರ್ ಅಹಮದ್ ಅವರು ಕವಿ ಮಾತ್ರವಲ್ಲದೇ ವೈಚಾರಿಕ ಬರಹಗಾರರು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟವರು. ಬಹಳ ವರ್ಷಗಳಿಂದ ಅವರೊಂದಿಗೆ ಸಂಪರ್ಕ ಹೊಂದಿದ್ದೇನೆ. ನನ್ನ ಬಗ್ಗೆ ಅವರಿಗೆ ಅಪಾರ, ಅಭಿಮಾನ ಇದೆ. ಸೌಮ್ಯ ಸ್ವಭಾವದ ನಿಸಾರ್ ಅಹಮದ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿ. ಸಾಹಿತಿಗಳ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವವರು. ಅವರಿಗೆ ನಾಡಿನ ಜನರ ಪರವಾಗಿ ಅಭಿನಂದನೆಗಳು.

ಮುಖ್ಯಮಂತ್ರಿಯಾಗಿ ಐದು ದಸರಾ ಉತ್ಸವದಲ್ಲಿ ಭಾಗವಹಿಸಿದ್ದೇನೆ. ಮುಂದಿನ ಐದು ವರ್ಷ ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಭಾಗವಹಿಸುವ ಆಶಯ ಇದೆ. ರಾಜ್ಯದ ಜನ ಆಶೀರ್ವಾದ ಮಾಡಲಿದ್ದು, ಈ ಆಶಯ ನೆರವೇರಲಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಮೊದಲಿನಿಂದಲೂ ನಮ್ಮ ವಿರೋಧವಿದ್ದು, ಈ ನಿಲುವನ್ನು ಸುಪ್ರೀಂಕೋರ್ಟ್ ನಲ್ಲಿ ಬಲವಾಗಿ ಪ್ರತಿಪಾದಿಸುವಂತೆ ನಮ್ಮ ವಕೀಲರಿಗೆ ಸೂಚಿಸಿದ್ದೇನೆ. ಮಂಡಳಿ ರಚನೆಗೆ ಅವಕಾಶ ಮಾಡಿಕೊಟ್ಟು ಕಾವೇರಿ ಕಣಿವೆಯ ರೈತರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ. ರೈತರ ಹಿತಕಾಯಲು ಸರ್ಕಾರ ಬದ್ಧವಾಗಿದ್ದು ಆತಂಕ ಬೇಡ. ವಿಚಾರಣೆ ವೇಳೆ ನ್ಯಾಯಾಲಯದಲ್ಲಿ‌ ನ್ಯಾಯಮೂರ್ತಿಗಳು ಸಾಂದರ್ಭಿಕವಾಗಿ ಮಂಡಳಿ‌‌ ರಚನೆ ವಿಚಾರ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಆದೇಶ ಮಾಡಿಲ್ಲ.

ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಸುಧಾರಿಸಿದೆ. ಆದರೆ, ರೈತರ ಬೆಳೆಗಳಿಗೆ ಅವರ ಬೇಡಿಕೆಗೆ ಅನುಗುಣವಾಗಿ ನೀರು ಕೊಡಲಾಗಿಲ್ಲ. ಬದಲಿಗೆ ಕೆರೆಗಳನ್ನು ತುಂಬಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಪಯತ್ನ ಮಾಡುತ್ತಿದ್ದೇವೆ. ಈಗ ಮಳೆ ಆಗಿರುವುದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯಾದ್ಯಂತ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ  ಬಿತ್ತನೆ ಆಗಬೇಕಿತ್ತು. 60 ಲಕ್ಷ ಹೆಕ್ಟೇರ್ ಗೂ ಹೆಚ್ವು ಪ್ರದೇಶದಲ್ಲಿ ಬಿತ್ತನೆ ಆಗಿದೆ.

ದಸರಾ ಮೆರವಣಿಗೆ ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿ ನಡೆಯುತ್ತದೆ. ಮೆರವಣಿಗೆಗೆ ರಕ್ಷಣಾ ಪಡೆಯ ಒಂದು ತುಕಡಿ ಕಳುಹಿಸುವಂತೆ ರಕ್ಷಣಾ ಸಚಿವರನ್ನು ಕೋರಿದ್ದೇನೆ. ದಸರೆಯ ಸಂದರ್ಭದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದ್ದೇನೆ.’

ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರಾದ ಮಹದೇವಪ್ಪ, ತನ್ವೀರ್ ಸೇಠ್, ಉಮಾಶ್ರೀ, ಪ್ರಿಯಾಂಕ ಖರ್ಗೆ, ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಉಪಸ್ಥಿತರಿದ್ದರೆ, ಶಾಸಕ ಜಿ.ಟಿ ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ವತಿಯಿಂದ ದಸರಾಗೆ ಚಾಲನೆ ದೊರೆತ ನಂತರ ಅರಮನೆಯಲ್ಲಿ ರಾಣಿ ಪ್ರಮೋದಾ ದೇವಿ ಹಾಗೂ ಯುವರಾಜ ಯುದುವೀರ್ ಅವರು ಪೂಜೆ ನಡೆಸಿ ಖಾಸಗಿ ದರ್ಬಾರಿಗೆ ಚಾಲನೆ ನೀಡಿದ್ದಾರೆ.


No comments:

Post a Comment